Menu

Home ನಲಿಕಲಿ About ☰ Menu


 

ದೇಶೀಯ - ಅನ್ಯದೇಶೀಯ | Deshiya & Anya Deshiya Padagalu in Kannada

          ಯಾವುದೇ ಭಾಷೆಯ ಮೂಲ ಜಗತ್ತಿನ ಒಂದು ಭಾಗದ ಅಥವಾ ಒಂದು ಗುಂಪಿನ ಜನರ ಸಂಸ್ಕೃತಿ, ಆಚಾರ-ವಿಚಾರಗಳ ಪ್ರತೀಕವಾಗಿದೆ. ಸಾಮಾಜಿಕ ಕಾರಣಗಳಿಂದ ಒಂದು ಭಾಗದ ಜನರು ಬೇರೆ ಭಾಗದ ಜನರೊಂದಿಗೆ ಬೆರೆತು ತಮ್ಮ ಆಚಾರ-ವಿಚಾರಗಳ ವಿನಿಮಯ ಮಾಡಿಕೊಳ್ಳುತ್ತಾರೆ. ಹೀಗೆ ವಿನಿಮಯ ಮಾಡಿಕೊಳ್ಳುವಾಗ ಭಾಷೆ ಪ್ರಮುಖ ಪಾತ್ರವಹಿಸುತ್ತದೆ.

        ಜನರ ವಿಚಾರ ವಿನಿಮಯದೊಂದಿಗೆ ಕೆಲವು ಪರ ಭಾಷಾ ಪದಗಳು ಮೂಲ ಭಾಷೆಗೆ ಬಂದು ಸೇರುವುದು ಸಾಮಾನ್ಯವಾದುದು. ಇದರಿಂದ ಭಾಷೆ ಬೆಳೆಯುತ್ತದೆ. ಹೆಚ್ಚು ಜನರು ಭಾಷೆಯನ್ನು ಕಲಿಯುವಲ್ಲಿ ಸಹಕಾರಿಯಾಗುತ್ತದೆ ಮತ್ತು ಭಾಷಾ ಸಂಪತ್ತು ಹೆಚ್ಚಾಗುತ್ತದೆ. ಹಾಗೆಂದು, ಮೂಲ ಪದಗಳ ಬಳಕೆ ಕಡಿಮೆಯಾಗುವುದಿಲ್ಲ. ಎರಡು ಭಾಷೆಯ ಶಬ್ದಗಳು ಉಚ್ಚಾರಣೆಗಳು ಒಂದೇ ರೀತಿಯಲ್ಲಿ ಇದ್ದಾಗ, ವ್ಯಾವಹಾರಿಕವಾಗಿ ಜನರಿಗೆ ಇದರಿಂದ ಲಾಭವಾಗುತ್ತದೆ ಮತ್ತು ಭಾಷೆಯ ಪ್ಯಾಪ್ತಿ ಮತ್ತು ಸಂವಹನೆ ಹೆಚ್ಚಾಗುತ್ತದೆ.

           ಕನ್ನಡದಲ್ಲಿಯೂ ಬೇರೆ ಭಾಷೆಗಳಿಂದ ಅನೇಕ ಶಬ್ದಗಳು ಬಂದು ಸೇರಿವೆ, ಸೇರುತ್ತಲಿವೆ. ಹಾಗೆಯೇ ಕನ್ನಡದ ಅನೇಕ ಶಬ್ದಗಳು ಬೇರೆ ಭಾಷೆಯಲ್ಲಿ ಸೇರಿವೆ. ಉದಾಹರಣೆಗೆ:-

>> "ಜಬರ್ದಸ್ತಿನಿಂದ ರೈಲು ಗಾಡಿಯಿಂದ ಹೊರ ಕಿದರು".

>> "ದೀನನಾದ ರೈತನು ಸರ್ಕಾರಕ್ಕೆ ಕಾಗದವನ್ನು ಬರೆದನು."

ಮೇಲಿನ ವಾಕ್ಯಗಳು ಕನ್ನಡ ಭಾಷೆಯ ವಾಕ್ಯವಾದರೂ, ಕನ್ನಡ ಶಬ್ದದ ಜೊತೆಗೆ ಬೇರೆ, ಬೇರೆ ಭಾಷೆಯ ಶಬ್ದಗಳು ಬಂದು ಸೇರಿವೆ.

🔹ಸಂಸ್ಕೃತದಿಂದ: ರೈತ, ದೀನ

🔹ಹಿಂದೀಯಿಂದ: ಜಬರ್ದಸ್ತ್, ಗಾಡಿ

🔹ಇಂಗ್ಲೀಷ್ ನಿಂದ: ರೈಲು

🔹ಹಿಂದೂಸ್ಥಾನಿಯಿಂದ: ಸರ್ಕಾರ, ಕಾಗದ

ಕನ್ನಡ ಭಾಷೆಯು ದ್ರಾವಿಡ ವರ್ಗಕ್ಕೆ ಸೇರಿದ ಭಾಷೆಯಾಗಿದೆ. ಸಂಸ್ಕೃತ, ಪ್ರಾಕೃತಗಳು ಆರ್ಯರ ಭಾಷೆಗಳಾಗಿವೆ. ಆರ್ಯರ ಮತ್ತು ದ್ರಾವಿಡರ ನಿಕಟ ಸಂಬಂಧದಿಂದ ಕನ್ನಡದಲ್ಲಿ ಅನೇಕ ಸಂಸ್ಕೃತ-ಪ್ರಾಕೃತ ಶಬ್ದಗಳು ಪ್ರಾಚೀನ ಕಾಲದಿಂದಲೇ ಸೇರಿಕೊಳ್ಳುತ್ತಿವೆ.

ನಂತರ ವಿದೇಶಿಯರ ಸಂಪರ್ಕದಿಂದಾಗಿ ಪಾರ್ಸಿ, ಇಂಗ್ಲೀಷ್, ಪೋರ್ಚುಗೀಸ್, ಅರಾಬಿಕ್ ಭಾಷೆಯ ಶಬ್ದಗಳು ಸೇರಿಕೊಂಡವು.

ಅಚ್ಚಗನ್ನಡ ಶಬ್ದಗಳನ್ನು 'ದೇಶ್ಯ' / 'ದೇಶೀಯ' ಶಬ್ದಗಳೆನ್ನುತ್ತೇವೆ. ಉಳಿದವುಗಳನ್ನು 'ಅನ್ಯದೇಶ್ಯ' / 'ಅನ್ಯದೇಶೀಯ' ಶಬ್ದಗಳೆನ್ನುತ್ತೇವೆ.

          ಸಂಸ್ಕೃತ-ಪ್ರಾಕೃತ ಶಬ್ದಗಳನೇಕವನ್ನು ಕನ್ನಡ ಭಾಷೆಯ ಗುಣಕ್ಕನುಗುಣವಾಗಿ ಅಲ್ಪಸ್ವಲ್ಪ ಬದಲಾವಣೆಗಳಿಂದ ಮತ್ತು ಹೆಚ್ಚಿನ ವ್ಯತ್ಯಾಸಗಳಿಂದ ಮಾರ್ಪಡಿಸಿಕೊಂಡು, ಅವಕ್ಕೆ ತದ್ಭವಗಳು ಎಂದು ಕರೆಯುತ್ತಾರೆ. ಕೆಲವು ಸಂಸ್ಕೃತ ಶಬ್ದಗಳನ್ನು ಯಾವ ವ್ಯತ್ಯಾಸವನ್ನೂ ಮಾಡದೆ ಅದೇ ಅರ್ಥದಲ್ಲಿ ಉಪಯೋಗಿಸುತ್ತೇವೆ. ಅವನ್ನು ತತ್ಸಮಗಳು ಎನ್ನುತ್ತೇವೆ.


ದೇಶ್ಯ / ದೇಶೀಯ ಅಚ್ಚಗನ್ನಡ ಶಬ್ದಗಳು

ಮಜ್ಜಿಗೆ, ಕಮ್ಮಗೆ, ಕಲ್ಲು, ತುರು, ನೆರೆ, ಮನೆ, ಹೊಲ, ಗದ್ದೆ, ಹಿತ್ತಿಲು, ಕದ, ಮರ, ಗಿಡ, ನೆಲ, ಆಳು, ತೆಂಕಣ, ಮೂಡಣ, ಪಡುವಣ, ಬಡಗಣ, ತೆವರು, ತಗ್ಗು, ಇಳಿ, ನೇಸರು, ತಿಂಗಳು, ಕಲ್ಲು, ನೆಲ್ಲು, ಹೊಳೆ,... ಇತ್ಯಾದಿಗಳು


ಅನ್ಯದೇಶ್ಯ  / ಅನ್ಯದೇಶೀಯ ಶಬ್ದಗಳು

ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು ಋಣ, ಋತು, ಗೃಹಿಣಿ, ಪ್ರಕೃತಿ, ಅಶಕ್ತ, ಏಕ, ಭೂಮಿ, ಪೃಥ್ವಿ, ನದಿ, ಆರ್ಯ, ಅನಾರ್ಯ, ರಾತ್ರಿ, ದಿವಸ, ಸಂಧ್ಯಾ, ಸಂಸ್ಥಾ, ರಾಮ, ಲಕ್ಷ್ಮಣ, ಭರತ, ಶತೃಘ್ನ, ಮಹಾಭಾರತ, ಕುಮಾರ, ಪಿತೃ, ಮಾತೃ, ಸಹೋದರ, ಸಹೋದರಿ, ಅಂಗ, ಅಂಗವಿಕಲ,... ಇತ್ಯಾದಿಗಳು


ಹಿಂದೂಸ್ಥಾನೀ ಭಾಷೆಯಿಂದ ಬಂದ ಶಬ್ದಗಳು

ಮಹಲ್, ಸವಾರ, ದವಾಖಾನೆ, ಕಾಗದ, ಅರ್ಜಿ, ಕಛೇರಿ, ತಯಾರ್, ಬದಲ್, ಕಾರ್ಖಾನೆ, ಖಾನೇಷುಮಾರ್, ಸರ್ಕಾರ, ರೈತ, ಸಲಾಮು, ಕಾನೂನು, ಜಮಿನು, ಬದಲಾವಣೆ, ಚುನಾವಣೆ,... ಇತ್ಯಾದಿಗಳು


ಇಂಗ್ಲೀಷಿನಿಂದ ಕನ್ನಡಕ್ಕೆ ಬಂದು ಬಳಕೆಯಾಗುತ್ತಿರುವ ಶಬ್ದಗಳು

ರಿಕಾರ್ಡ್, ಆಕ್ಸಿಜನ್, ಹೋಟೆಲ್, ಆಸಿಡ್, ಫುಟ್ ಪಾತ್, ಬೋರ್ಡ್, ರೋಡ್, ರೈಲ್, ಕೋರ್ಟ್, ಬ್ಯಾಂಕ್, ಚೆಕ್, ಚಲನ್, ಲಾಯರ್, ಪಿಟೀಲ್, ಹಾರ್ಮೋನಿಯಂ, ಬೆಂಚ್, ಪ್ಲೇಗ್, ಮೈಲು,... ಇತ್ಯಾದಿಗಳು


ಪೋರ್ಚುಗೀಸ್ ಭಾಷೆಯಿಂದ ಬಂದ ಶಬ್ದಗಳು

ಅಲಮಾರು, ಸಾಬೂನು, ಪಾದ್ರಿ, ಮೇಜು,... ಇತ್ಯಾದಿಗಳು


ಅನ್ಯ ದೇಶ್ಯ ಶಬ್ದಗಳನ್ನು ವಿಷಯವನ್ನು ಸುಲಭವಾಗಿ ಅರ್ಥೈಸುವಲ್ಲಿ ಬಳಸುವುದು ಮಾತ್ರವಲ್ಲದೆ, ಅವು ಭಾಷೆಯ ವಿಸ್ತಾರವನ್ನು ಸಹ ತೋರ್ಪಡಿಸುತ್ತದೆ.


ಸಮಾಸಗಳು | Samasagalu in Kannada


 ಎರಡು ಅಥವಾ ಅನೇಕ ಪದಗಳು ಸೇರಿ ಒಂದು ಪದವಾಗುವಾಗ ಮಧ್ಯದಲ್ಲಿ ವಿಭಕ್ತಿ ಪ್ರತ್ಯಯ ಲೋಪವಾದಾಗ 'ಸಮಾಸ' ವೆನಿಸುವುದು.

ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದೂ ಎರಡನೆಯ ಪದವು ಉತ್ತರ ಪದವೆಂದು ಕರೆಯುತ್ತಾರೆ. ಸಮಾಸ ಪದವನ್ನು ಬಿಡಿಸಿ ಬರೆಯುವುದಕ್ಕೆ 'ವಿಗ್ರಹ ವಾಕ್ಯ' ಎನ್ನುತ್ತಾರೆ.


ಪೂರ್ವಪದ + ಉತ್ತರಪದ = ವಿಗ್ರಹ ವಾಕ್ಯ -> ಸಮಾಸ


ಉದಾ:-

ಕಾಲಿನ + ಬಳೆ = ಕಾಲು ಬಳೆ -> ತತ್ಪುರುಷ ಸಮಾಸ

ಕಲ್ಲಿನಂತಿರುವ + ಇದ್ದಿಲು = ಕಲ್ಲಿದ್ದಿಲು -> ತತ್ಪುರುಷ ಸಮಾಸ


ಸಮಾಸದಲ್ಲಿ ಎಂಟು ವಿಧಗಳಿವೆ

  1. ತತ್ಪುರುಷ ಸಮಾಸ
  2. ಕರ್ಮಧಾರೆಯ ಸಮಾಸ
  3. ಅಂಶಿ ಸಮಾಸ
  4. ದ್ವಿಗು ಸಮಾಸ
  5. ದ್ವಂದ್ವ ಸಮಾಸ
  6. ಬಹುವ್ರೀಹಿ ಸಮಾಸ
  7. ಕ್ರಿಯಾ ಸಮಾಸ
  8. ಗಮಕ ಸಮಾಸ

೧. ತತ್ಪುರುಷ ಸಮಾಸ


ಎರಡು ನಾಮಪದಗಳು ಸೇರಿ ಸಮಾಸ ಪದವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ 'ತತ್ಪುರುಷ ಸಮಾಸ' ಎನ್ನುತ್ತಾರೆ.

ತತ್ಪುರುಷ ಸಮಾಸಗಳಲ್ಲಿ ಕನ್ನಡ + ಕನ್ನಡ ಶಬ್ದಗಳು ಸೇರಿ ಸಮಾಸವಾದಾಗ ಷಷ್ಠಿ ಅಥವಾ ಸಪ್ತಮಿ ವಿಭಕ್ತಿ ಪ್ರತ್ಯಯಗಳು ಲೋಪವಾಗುವುದೇ ಹೆಚ್ಚು. 

ಉದಾ:-

ಕಾಲಿನ + ಬಳೆ = ಕಾಲುಬಳೆ -> ಷಷ್ಠಿ ತತ್ಪುರುಷ ಸಮಾಸ

ಸಂಜೆಯ + ಕೆಂಪು = ಸಂಜೆಗೆಂಪು -> ಷಷ್ಠಿ ತತ್ಪುರುಷ ಸಮಾಸ

ಬೆಟ್ಟದ + ತಾವರೆ = ಬೆಟ್ಟದಾವರೆ -> ಷಷ್ಠಿ ತತ್ಪುರುಷ ಸಮಾಸ

ಕಣ್ಣಿನಲ್ಲಿ + ಉರಿ = ಕಣ್ಣುರಿ -> ಸಪ್ತಮಿ ತತ್ಪುರುಷ ಸಮಾಸ

ಹಗಲಿನಲ್ಲಿ + ಕನಸು = ಹಗಲುಗನಸು -> ಸಪ್ತಮಿ ತತ್ಪುರುಷ ಸಮಾಸ

ಸಂಸ್ಕೃತ + ಸಂಸ್ಕೃತ ತತ್ಪುರುಷ ಸಮಾಸ ಉದಾಹರಣೆಗಳು.

ಉತ್ತಮದಲ್ಲಿ + ಉತ್ತಮ = ಉತ್ತಮೋತ್ತಮ

ದೇವರ + ಮಂದಿರ = ದೇವಮಂದಿರ

ಕವಿಗಳಿಂದ + ವಂದಿತ = ಕವಿವಂದಿತ

ಪುರುಷರಲ್ಲಿ + ಉತ್ತಮ = ಪುರುಷೋತ್ತಮ


ಸಂಸ್ಕೃತ + ಸಂಸ್ಕೃತ ತತ್ಪುರುಷ ಸಮಾಸ ಉದಾಹರಣೆಗಳು.

ಉತ್ತಮದಲ್ಲಿ + ಉತ್ತಮ = ಉತ್ತಮೋತ್ತಮ

ದೇವರ + ಮಂದಿರ = ದೇವಮಂದಿರ

ಕವಿಗಳಿಂದ + ವಂದಿತ = ಕವಿವಂದಿತ

ಪುರುಷರಲ್ಲಿ + ಉತ್ತಮ = ಪುರುಷೋತ್ತಮ

೨. ಕರ್ಮಧಾರೆಯ ಸಮಾಸ


ವಿಶೇಷಣ ಮತ್ತು ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸವು 'ಕರ್ಮಧಾರೆಯ ಸಮಾಸ' ವೆನಿಸುವುದು.

ಉದಾ:-

ಹಿರಿದು + ಮರ = ಹೆಮ್ಮರ

ಬಿಳಿಯ + ಮುಗಿಲು = ಬೆಳ್ಮುಗಿಲು

ಹಿರಿದು + ಬಾಗಿಲು = ಹೆಬ್ಬಾಗಿಲು


ಮೇಲಿನ ಉದಾಹರಣೆಗಳಲ್ಲಿ 'ಹಿರಿದು' ಮತ್ತು 'ಬಿಳಿಯ' ವಿಶೇಷಣಗಳಾಗಿವೆ. 'ಮರ', 'ಮುಗಿಲು' ಮತ್ತು 'ಬಾಗಿಲು' ವಿಶೇಷ್ಯಗಳಾಗಿವೆ.

೩. ಅಂಶಿ ಸಮಾಸ


ಪೂರ್ವ ಮತ್ತು ಉತ್ತರ ಪದಗಳು ಅಂಶ ಮತ್ತು ಅಂಶಿ ಭಾವದಿಂದ ಸೇರಿದ್ದರೆ, ಅದನ್ನು ಅಂಶಿ ಸಮಾಸ ಎನ್ನುವರು. 

ಉದಾ:-

ನಾಲಿಗೆಯ + ತುದಿ = ತುದಿನಾಲಿಗೆ

ತುಟಿಯ + ಕೆಳಗೆ = ಕೆಳದುಟಿ

ಮೈಯ + ಒಳಗೆ = ಒಳಮೈ


ಮೇಲಿನ ಉದಾಹರಣೆಯಲ್ಲಿ ನಾಲಗೆಯ ಒಂದು ಭಾಗವನ್ನು ಉಲ್ಲೇಖಿಸಲಾಗಿದೆ. ಹಾಗೆಯೇ ಇನ್ನೊಂದು ಉದಾಹರಣೆಯಲ್ಲಿ ತುಟಿಯ ಭಾಗವನ್ನು ಹೇಳಲಾಗಿದೆ. ಇಲ್ಲಿ ತುದಿ ಹಾಗೂ ಕೆಳಗೆ ಎಂಬುದು 'ಅಂಶ' ಗಳಾದರೆ, ನಾಲಗೆ ಮತ್ತು ತುಟಿ 'ಅಂಶಿ' ಗಳಾಗಿವೆ.

೪. ದ್ವಿಗು ಸಮಾಸ


ಪೂರ್ವಪದವು ಸಂಖ್ಯಾ ಸೂಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ 'ದ್ವಿಗು ಸಮಾಸ'. 

ಉದಾ:-

ಒಂದು + ಕಟ್ಟು = ಒಗ್ಗಟ್ಟು

ಎರಡು + ಮಡಿ = ಇಮ್ಮಡಿ

೫. ದ್ವಂದ್ವ ಸಮಾಸ


ಎರಡು ಅಥವಾ ಅನೇಕ ನಾಮ ಪದಗಳು ಸೇರಿ ಸಮಾಸವಾದಾಗ ಎಲ್ಲಾ ಪದಗಳ ಅರ್ಥಗಳು ಪ್ರಧಾನವಾಗಿದ್ದರೆ ಆ ಸಮಾಸಕ್ಕೆ 'ದ್ವಂದ್ವ ಸಮಾಸ' ಎಂದು ಹೆಸರು. 

ಉದಾ:-

ಗಿಡವೂ + ಮರವೂ = ಗಿಡಮರ

ಕಸವೂ + ಕಡ್ಡಿಯೂ = ಕಸಕಡ್ಡಿ

ರಾಮನು + ಲಕ್ಷ್ಮಣನೂ = ರಾಮಲಕ್ಷ್ಮಣ

೬. ಬಹುವ್ರೀಹಿ ಸಮಾಸ


ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ ಅರ್ಥವು ಪ್ರಧಾನವಾಗುಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸವೆನ್ನುತ್ತಾರೆ. 

ಉದಾ:-

ಕೆಂಪಾದ + ಕಣ್ಣು ಉಳ್ಳವ = ಕೆಂಗಣ್ಣ

ಚಕ್ರವನ್ನು + ಪಾಣಿಯಲ್ಲಿ ಉಳ್ಳವನು = ಚಕ್ರಪಾಣಿ

ಕರಿಯನ್ನು + ಮುಖವಾಗಿ ಉಳ್ಳವನು = ಕರಿಮುಖ

೭. ಕ್ರಿಯಾ ಸಮಾಸ


ಸಮಾಸದಲ್ಲಿ ಉತ್ತರ ಪದವು ಕ್ರಿಯಾ ಸೂಚಕವಾಗಿದ್ದರೆ ಅದು ಕ್ರಿಯಾ ಸಮಾಸವಾಗುತ್ತದೆ. 

ಉದಾ:-

ಮುದ್ದನ್ನು + ಮಾಡು = ಮುದ್ದುಮಾಡು

ಕಣ್ಣನ್ನು + ತೆರೆ = ಕಣ್ದೆರೆ

ಮೈಯನ್ನು + ತಡವಿ = ಮೈದಡವಿ

೮. ಗಮಕ ಸಮಾಸ


ಪೂರ್ವ ಪದವು ಸರ್ವನಾಮ ಅಥವಾ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರ ಪದವು ನಾಮ ಪದವಾಗಿದ್ದರೆ ಅದನ್ನು ಗಮಕ ಸಮಾಸವೆನ್ನುತ್ತಾರೆ.

ಉದಾ:-

ಇವನು + ಮುದುಕ = ಈ ಮುದುಕ

ಅವು + ಪ್ರಾಣಿಗಳು = ಆ ಪ್ರಾಣಿಗಳು

ಮಾಡಿದುದು + ಅಡುಗೆ = ಮಾಡಿದಡುಗೆ

ಬಾಡಿದುದು + ಹೂವು = ಬಾಡಿದ ಹೂವು

ಉಡುವುದು + ದಾರ = ಉಡುದಾರ

ಅರಿ ಸಮಾಸ


ಬಹುತೇಕ ಸಮಾಸಗಳು ಕನ್ನಡ + ಕನ್ನಡ ಅಥವಾ ಸಂಸ್ಕೃತ + ಸಂಸ್ಕೃತ ಪದಗಳು ಸೇರಿ ಆಗಿರುತ್ತವೆ. ಆದರೆ ಕೆಲವು ಪದಗಳು ಕನ್ನಡ + ಸಂಸ್ಕೃತ ಪದಗಳು ಸೇರಿ ಸಮಾಸ ಪದಗಳಾಗಿರುತ್ತವೆ. ಈ ಪದಗಳನ್ನು ಶುದ್ಧ ಸಮಾಸ ಪದಗಳೆಂದು ಕರೆಯಲಾಗದು. ಹೀಗೆ ಕನ್ನಡ ಮತ್ತು ಸಂಸ್ಕೃತ ಶಬ್ಧಗಳು ಸೇರಿ ಆಗುವ ಸಮಾಸವನ್ನು 'ಅರಿ ಸಮಾಸ' ವೆನ್ನುತ್ತಾರೆ.

ಉದಾ:-

ಗಜದ + ದಳ = ಗಜದಳ

ಅಂಕದಲ್ಲಿ + ನೇತ್ರ = ಅಂಕನೇತ್ರ

ಮಂಗಳದ + ಆರತಿ = ಮಂಗಳಾರತಿ


ಸಮಾಸಗಳನ್ನು ಸುಲಭವಾಗಿ ಗುರುತಿಸಲು ಕೆಲವು ಲಕ್ಷಣಗಳು.

೧. ಉತ್ತರಪದಾರ್ಥ ಪ್ರಧಾನವಾದುದು ತತ್ಪುರುಷಸಮಾಸ.

೨. ವಿಶೇಷಣ ವಿಶೇಷಭಾವ ಸಂಬಂಧ-ಮತ್ತು ಸಮಾನಾಧಿಕರಣಗಳುಳ್ಳದ್ದು ಕರ್ಮಧಾರಯಸಮಾಸ.

೩. ಸಂಖ್ಯಾಪೂರ್ವಪದವಾಗಿ ಉಳ್ಳದ್ದು ದ್ವಿಗುಸಮಾಸ.

೪. ಅಂಶಾಂಶಿಭಾವಸಂಬಂಧವುಳ್ಳದ್ದು ಅಂಶಿಸಮಾಸ.

೫. ಸರ್ವಪದಾರ್ಥ ಪ್ರಧಾನವಾದುದು ದ್ವಂದ್ವಸಮಾಸ.

೬. ಅನ್ಯಪದಾರ್ಥ ಪ್ರಧಾನವಾದದ್ದು ಬಹುವ್ರೀಹಿಸಮಾಸ.

೭. ಪೂರ್ವಪದ-ಸರ್ವನಾಮ ಅಥವಾ ಕೃದಂತಗಳಲ್ಲಿ ಒಂದಾಗಿದ್ದು ಉತ್ತರದ ನಾಮಪದದೊಡನೆ ಕೂಡಿ ಆಗುವ ಸಮಾಸ ಗಮಕಸಮಾಸ.

೮. ಪೂರ್ವಪದ ದ್ವಿತೀಯಾಂತವಾಗಿದ್ದು ಉತ್ತರದ ಕ್ರಿಯೆಯೊಡನೆ ಕೂಡಿ ಆಗುವ ಸಮಾಸ ಕ್ರಿಯಾಸಮಾಸ.

೯. ಅರಿಸಮಾಸ:- ಕನ್ನಡ ಪದಗಳೊಡನೆ ಸಂಸ್ಕೃತ ಪದಗಳನ್ನು ಸೇರಿಸಿ ಸಮಾಸ ಮಾಡಬಾರದು. ಮಾಡಿದರೆ ಅರಿಸಮಾಸವೆನಿಸುವುದು.

ಲೇಖನ ಚಿಹ್ನೆಗಳು | Lekhana Chinhegalu


         ರವಣಿಗೆಯ ಮೂಲಕ ಪ್ರಕಟವಾಗುವ ಆಲೋಚನೆ ಅಭಿಪ್ರಾಯಗಳಲ್ಲಿ ಅರ್ಥೈಸಲು ವಾಕ್ಯ ಮತ್ತು ವಾಕ್ಯ ಭಾಗಗಳ ಉಚಿತವಾದ ಎಡೆಗಳಲ್ಲಿ ಕಲ್ಪಿಸುವ ವಿರಾಮಸ್ಥಾನಗಳ ಲಿಖಿತಸಂಕೇತಗಳೇ ಲೇಖನ ಚಿಹ್ನೆಗಳು.

     ಲೇಖನ ಚಿಹ್ನೆಗಳಿಲ್ಲದಿದ್ದಲ್ಲಿ ವಾಕ್ಯಗಳ ಅರ್ಥ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಬರೆಯುವಾಗ ಸರಿಯಾದ ಚಿಹ್ನೆಗಳನ್ನು ಬಳಸುವುದರಿಂದ, ಓದುಗನು ಬರವಣಿಗೆಯ ಸರಿಯಾದ ಅರ್ಥವನ್ನು ಗ್ರಹಿಸಬಹುದಲ್ಲದೆ, ಸರಿಯಾದ ರೀತಿಯಲ್ಲಿ ವಾಚನವನ್ನು ಮಾಡಬಹುದು.

     ಕನ್ನಡದಲ್ಲಿ ಮೊದಲು ಲೇಖನ ಚಿಹ್ನೆಗಳು ರೂಢಿಯಲ್ಲಿರಲಿಲ್ಲ. ಐತಿಹಾಸಿಕ ಹಸ್ತಪ್ರತಿಗಳಲ್ಲಿ, ಶಾಸನಗಳಲ್ಲಿ ಯಾವುದೇ ಲೆಖನ ಚಿಹ್ನೆಗಳು ಕಂಡುಬರುವುದಿಲ್ಲ. ಆಂಗ್ಲಭಾಷಾ ಪ್ರಭಾವದಿಂದಾಗಿ, ಕೆಲವು ಲೇಖನ ಚಿಹ್ನೆಗಳನ್ನು ಕನ್ನಡ ಭಾಷೆಯಲ್ಲಿಯೂ ಬಳಸಲಾಗುತ್ತದೆ.


1. ಪೂರ್ಣವಿರಾಮ(.)

ಒಂದು ಪೂರ್ಣಕ್ರಿಯಾಪದದಿಂದ ಕೂಡಿದ ವಾಕ್ಯದ ಕೊನೆಗೆ ಬರುವ ಚಿಹ್ನೆ.

ಉದಾ:-

 ವಿದ್ಯಾರ್ಥಿಗಳು ಪದ್ಯವನ್ನು ಹಾಡುತ್ತಾರೆ.

ಊರಿನಲ್ಲಿ ಇಂದು ಜಾತ್ರಾ ಮಹೋತ್ಸವ ಇದೆ.


2. ಅರ್ಧವಿರಾಮ(;)

ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಗಿದ್ದಾಗ, ಆ ಉಪವಾಕ್ಯಗಳ ಕೊನೆಗೆ ಬರುವ ಚಿಹ್ನೆ.

ಉದಾ:-

ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ.

 ಅಂದು ಮಳೆ ಬಂದಿತು; ಆದುದರಿಂದ ಆಟವಾಡಲಿಲ್ಲ.


3. ಅಲ್ಪವಿರಾಮ(,)

ಇದು ಬರುವ ಸಂದರ್ಭಗಳು ಹಲವು.

ಒಂದು ಕ್ರಿಯಾಪದಕ್ಕೆ ಹೊಂದಿಕೊಂಡು ಬರುವ ಬೇರೆಬೇರೆ ಪದಗಳನ್ನು ಪ್ರತ್ಯೇಕಿಸುವುದು.

ಸಂಬಂಧಸೂಚಕಾವ್ಯದಿಂದ ಕೂಡಿದ ಪದಯುಗ್ಮಗಳು ಹಲವು ಬಂದಾಗ, ಅವನ್ನು ಪ್ರತ್ಯೇಕಿಸುವುದು.

ನಾಮಪದಗಳು ಅಥವಾ ಅಂತಹ ವಾಕ್ಯಾಂಶವನ್ನು ಅದರ ವಿವರಣೆಯ ವಾಕ್ಯಭಾಗದಿಂದ ಪ್ರತ್ಯೇಕಿಸುವುದು.

ಆಗಿ, ಆದರೆ, ಆದ್ದರಿಂದ, ಆದಕಾರಣ, ಆಗಲು ಎಂಬ ಕೃದಂತರೂಪಗಳ ತರುವಾಯದಲ್ಲಿಯೂ ಬರುವುದು.

ಉದ್ಧೃತ ಭಾಗಗಳನ್ನು ವಾಕ್ಯದ ಇತರ ಭಾಗದಿದಂದ ಪ್ರತ್ಯೇಕಿಸುವುದು.

ಸಂಭೋಧನೆಯ ಶಬ್ದದ ತರುವಾಯದಲ್ಲಿ ಬರುವುದು.

ಉದಾ:-

ರಾಮನು ಶೂರನೂ, ಧೀರನೂ, ಉದಾರಿಯೂ ಆಗಿದ್ದನು.

 ಬರವಣಿಗೆಯು ಅಂದವಾಗಿ, ಸ್ಪುಟವಾಗಿ ಇರಬೇಕು.

✦ ಹೊಡೆದಾಟದಲ್ಲಿ ಮಕ್ಕಳು, ಸ್ರೀಯರು, ಮುದುಕರು ಗಾಯಗೊಂಡರು.

✦ ಕಾರ್ಮೋಡಗಳು ಕವಿದಿದ್ದರಿಂದ, ಮಳೆಯಾಗುವುದು ಖಾತ್ರಿಯಯಿತು.

✦ ರಾಮ, ಹೇಗಿದ್ದೀಯ?


4. ವಿವರಣಾತ್ಮಕ ಚಿಹ್ನೆ(:)

ಒಂದು ಅಭಿಪ್ರಾಯದ ವಿವರಣೆ ಮುಂದಿ ನಂತೆ ಇದೆ ಎಂಬುದಾಗಿ ತೋರಿಸುವಾಗಲೂ, ಪದಗಳೂ ವಾಕ್ಯಗಳೂ ಬೇರೆಯಾಗಿದ್ದರೂ ಅರ್ಥದಲ್ಲಿ ಆತ್ಮೀಯ ಸಂಬಂಧವಿದೆಯೆಂದು ತೋರಿಸುವಾಗಲೂ ಬಳಸುವ ಚಿಹ್ನೆ.


5. ವಿವರಣಾತ್ಮಕ ಚಿಹ್ನೆ ಮತ್ತು ದೀರ್ಘಸಮತಲ ರೇಖೆ(:-)

ಉದ್ಗೃತ ವಾಕ್ಯಗಳನ್ನು ಮುಂದೆ ಎತ್ತಿಕೊಡುವಾಗಲೂ, ಎಣಿಕೆ ಉದಾಹರಣೆ ಮೊದಲಾದವುಗಳ ಆರಂಭದಲ್ಲಿಯೂ ಬಳಸುವ ಚಿಹ್ನೆ.


6. ಪ್ರಶ್ನಾರ್ಥಕ ಚಿಹ್ನೆ(?)

ಪ್ರಶ್ನಾರ್ಥಕ ಪದ ಅಥವಾ ವಾಕ್ಯದ ಮುಂದೆ ಹಾಕುವ ಚಿಹ್ನೆ.

ಉದಾ:-

✦ ನೀನು ಯಾರು?

✦ ಕರ್ನಾಟಕದ ರಾಜಧಾನಿ ಯಾವುದು?


7. ಭಾವಸೂಚಕ ಚಿಹ್ನೆ(!)

ಹರ್ಷ, ವಿವಾದ, ಆಶ್ಚರ್ಯ, ಕೋಪ, ಮೊದಲಾದ ಭಾವಗಳನ್ನು ಪ್ರಕಟಿಸುವ ಶಬ್ದಗಳ ಮತ್ತು ವಾಕ್ಯಗಳ ಕೊನೆಗೆ ಹಾಕುವ ಚಿಹ್ನೆ.

ಉದಾ:-

✦ ಆಹಾ! ಮೈಸೂರು ದಸರಾ ಎಷ್ಟೊಂದು ಸುಂದರವಾಗಿದೆ!

✦ ಅಯ್ಯೋ ದೇವರೇ! ಹೀಗಾಯಿತಲ್ಲ!

✦ ಛೀ! ಮೂರ್ಖ ತೊಲಗು!


8. ಆವರಣ ಚಿಹ್ನೆ ( )

ವಾಕ್ಯದ ಮುಖ್ಯಭಾಗವನ್ನು ಅದರೊಂದಿಗೆ ನೇರ ಸಂಬಂಧವಿಲ್ಲದ, ಆದರೂ ಸಹಾಯವಾದ ಮಾತಿಗಳಿಂದ ಬೇರ್ಪಡಿಸುವುದಕ್ಕೆ ಅಥವಾ ಪರ್ಯಾಯ ಪದಗಳನ್ನಾಗಲಿ ವಿವರಣಾತ್ಮಕ ಪದಗಳು ವಾಕ್ಯಗಳನ್ನಾಗಲಿ ಆಕರಗಳನ್ನಾಗಲಿ ಸೂಚಿಸುವುದಕ್ಕೆ ಬಳಸುವ ದುಂಡುಕಂಸಗಳ ಚಿಹ್ನೆ. ಈ ಚಿಹ್ನೆಯ ಪ್ರತಿಯಾಗಿ, ಅಂತಹ ಪದ ಅಥವಾ ವಾಕ್ಯಗಳ ಮೊದಲು ಕೊನೆಗಳಲ್ಲಿ ಒಂದೊಂದು ಚಿಕ್ಕ ಸಮತಲ ರೇಖೆಯನ್ನು ಬಳಸುವುದುಂಟು.


9. ಉದ್ಧರಣ ಅಥವಾ ವಾಕ್ಯವೇಷ್ಟನ ಚಿಹ್ನೆ(" ")

ಇನ್ನೊಬ್ಬರು ಹೀಗೆ ಹೇಳಿದರೆಂದು ಅವರ ಮಾತುಗಳನ್ನೇ ನೇರವಾಗಿ ಉದ್ಧರಿಸುವಾಗ, ಆ ಉದ್ಧರಣ ಭಾಗದ ಕೊನೆಗಳಲ್ಲಿ ಬಳಸುವ ಚಿಹ್ನೆ.

ಉದಾ:-

✦ "ಸ್ವಂತ ಮನೆ ಇರುವುದು ಬಸವನ ಹುಳುವಿಗೊಂದೆ." - ಬೀಚಿ.

✦ ಮಹಾಭಾರತದಲ್ಲಿ "ಧರ್ಮಕ್ಕೇ ಎಂದಿಗೂ ಜಯ" ಎಂದು ಹೇಳಲಾಗಿದೆ.


10. ಪಾರಿಭಾಷಿಕ ಚಿಹ್ನೆ (' ')

ಪಾರಿಭಾಷಿಕ ಪದಗಳನ್ನು ಬಳಸಿ ಅದರ ಸಮಾನಾರ್ಥವನ್ನು ಹೇಳುವಾಗ, ಆ ಪದವನ್ನು ಈ ಚಿಹ್ನೆಯ ಮೂಲಕ ಗುರುತಿಸಲಾಗುತ್ತದೆ. ಇನ್ನೂ ಕೆಲವೆಡೆಗಳಲ್ಲಿ ನಾಮ ಪದಗಳನ್ನು ಗುರುತಿಸುವಲ್ಲಿಯೂ ಬಳಸುತ್ತಾರೆ.

ಉದಾ:-

✦ ಆಮ್ಲಜನಕವನ್ನು ಇಂಗ್ಲೀಷ್ ಭಾಷೆಯಲ್ಲಿ 'ಆಕ್ಸಿಜನ್' ಎನ್ನುತ್ತಾರೆ.

✦ ಬಿ. ಎಂ. ಶ್ರೀಕಂಠಯ್ಯನವರ ಕಾವ್ಯನಾಮ 'ಶ್ರೀ'  


11. ಹ್ರಸ್ವ ಸಮತಲರೇಖೆ(-)

ಪದಗಳ ಸೇರಿಕೆಯನ್ನು ಬೇರ್ಪಡಿಸಿ, ಪ್ರತ್ಯಯಗಳನ್ನು ಪ್ರತ್ಯೇಕಿಸುವಾಗ, ಶಬ್ದಗಳಲ್ಲಿ ಆದ ವ್ಯತ್ಯಾಸವನ್ನು ತೊರಿಸುವಾಗ ಅಥವಾ ಮುಕ್ತಾಯವಾಗದ ಪದಾಂಶ ಮುಂದಿನ ಸಾಲಿಗೆ ಸಾಗುವಂತಿದ್ದಾಗ ಬಳಸುವ ಚಿಹ್ನೆ.

ಉದಾ:-

✦ ಮಾಲಾ-ಮಾಲೆ, ಭಾಷಾ-ಭಾಷೆ


12. ಸಮಾನಾರ್ಥಕ ಚಿಹ್ನೆ (=)

ಎರಡು ಪದಗಳ ಅರ್ಥವೂ ಸಮಾನ ಎಂದು ಹೇಳುವಾಗ, ಅಥವಾ ಎರಡು ಪದಗಳು ಸೇರಿ ಒಂದು ಪದವಾಗುವುದನ್ನು ತೋರಿಸುವಾಗ, '=' ಚಿಹ್ನೆಯನ್ನು ಬಳಸುತ್ತಾರೆ.

ಉದಾ:-

✦ ಅರಸನ + ಮನೆ = ಅರಮನೆ

  ರಾಯ = ರಾಜ 

✦ ಅಸುರ = ರಾಕ್ಷಸ 


13. ಅಧಿಕ ಚಿಹ್ನೆ (+)

ಎರಡು ಪದಗಳು ಸೇರಿವೆ ಎಂದು ತೋರಿಸುವಾಗ ಮತ್ತು ಎರಡು ಸಂಖ್ಯೆಗಳು ಸೇರುವುದನ್ನು ತೊರಿಸುವಾಗ ಅಧಿಕ ಚಿಹ್ನೆಯನ್ನು ಬಳಸಲಾಗುತ್ತದೆ.

ಉದಾ:-

✦ ಕೈ + ಮುಂದೆ = ಮುಂಗೈ

✦ ಮನೆ + ಅಲ್ಲಿ = ಮನೆಯಲ್ಲಿ

 10 + 20 = 30


Popular Post