Menu

Home ನಲಿಕಲಿ About ☰ Menu


 

🔍

ರಾಷ್ಟ್ರೀಯ ಕ್ರೀಡಾ ದಿನ - 'ಮೇಜರ್ ಧ್ಯಾನ್‌ ಚಂದ್‌'

Indian National Sports Day
   “ಸದೃಢ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ” ಎಂಬ ವಿವೇಕಾನಂದರ ವಾಣಿಯಂತೆ  ದೈಹಿಕವಾಗಿ ಸದೃಢವಾಗಿರುವುದು  ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿಯೇ ಪ್ರತಿವರ್ಷ ಆಗಸ್ಟ್ 29 ರಂದು ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ ಚಂದ್‌ ಅವರು ಜನುಮದಿನವನ್ನು ಭಾರತದಲ್ಲಿ 'ರಾಷ್ಷ್ರೀಯ ಕ್ರೀಡಾ ದಿನ' ಎಂದು ಆಚರಿಸಲಾಗುತ್ತದೆ 

​ರಾಷ್ಟ್ರೀಯ ಕ್ರೀಡಾ ದಿನದ ಇತಿಹಾಸ :
        ಭಾರತದ ಹಾಕಿ ದಂತಕತೆ, ಶ್ರೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನ್‌ ಚಂದ್‌ ಅವರ ಸ್ಮರಣಾರ್ಥ ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷ ಆಗಸ್ಟ್‌ 29 ರಂದು 'ರಾಷ್ಟ್ರೀಯ ಕ್ರೀಡಾ ದಿನ' ಎಂದು ಆಚರಣೆ ಮಾಡಲಾಗುತ್ತದೆ. ರಾಷ್ಟ್ರೀಯ ಕ್ರೀಡಾ ದಿನವನ್ನು ಭಾರತದಲ್ಲಿ ಮೊದಲ ಬಾರಿಗೆ 2012 ರಲ್ಲಿ ಆಚರಿಸಲಾಯಿತು. ಅದೇ ವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನು, ರಾಷ್ಟ್ರೀಯ ದಿನಗಳ ಪಟ್ಟಿಗೆ ಸೇರಿಸಲಾಯಿತು. ಮೇಜರ್ ಧ್ಯಾನದ ಚಂದ್ ಆಗಸ್ಟ್ 29, 1905 ರಲ್ಲಿ ಅಹಮದಾಬಾದ್‌ನಲ್ಲಿ ಜನಿಸಿದರು. ವಿಶ್ವಕಂಡ ಅಪರೂಪದ, ಅತ್ಯತ್ತಮ ಹಾಕಿ ಆಟಗಾರ ಎಂಬ ಹೆಗ್ಗಳಿಕೆಗೆ ಧ್ಯಾನ್‌ ಚಂದ್ ಪಾತ್ರರಾಗಿದ್ದರು.

ರಾಷ್ಟ್ರೀಯ ಕ್ರೀಡಾ ದಿನದ ಆಚರಣೆಯ ಮಹತ್ವ :
       ರಾಷ್ಟ್ರೀಯ ಕ್ರೀಡಾ ದಿನ ಆಚರಣೆಯ ಮುಖ್ಯ ಉದ್ದೇಶ ಕ್ರೀಡೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಮತ್ತು ದೈನಂದಿನ ಜೀವನದಲ್ಲಿ ದೈಹಿಕವಾಗಿ ಸಕ್ರಿಯವಾಗಿರುವಂತೆ ಪ್ರೇರೆಪಿಸುವುದು & ಕ್ರೀಡೆಯಿಂದಾಗುವ ಅನುಕೂಲಗಳನ್ನು ತಿಳಿಸಿ ಯುವಜನತೆಯಲ್ಲಿ ಕ್ರೀಡಾಪ್ರೇಮ ಹೆಚ್ಚಿಸುವುದು. ಇದು ದೇಶದಲ್ಲಿ ಕ್ರೀಡಾಭಿಮಾನಿಗಳನ್ನು ಆಕರ್ಷಿಸುವಲ್ಲಿ ಯಶಸ್ಸು ಕಾಣುತ್ತಿದೆ.  2012 ರಲ್ಲಿ ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಉದ್ಘಾಟನಾ ಆಚರಣೆಯ ನಂತರ, ವಿವಿಧ ಕ್ರೀಡೆ-ಸಂಬಂಧಿತ ಯೋಜನೆಗಳನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿತು. ಇದರ ಭಾಗವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2018 ರಲ್ಲಿ ಖೇಲೋ ಇಂಡಿಯಾ ಅಭಿಯಾನವನ್ನು ಘೋಷಿಸಿದರು.

         ಹರಿಯಾಣ, ಪಂಜಾಬ್ ಮತ್ತು ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ದೈಹಿಕ ಚಟುವಟಿಕೆಗಳು ಮತ್ತು ಜೀವನದಲ್ಲಿ ಕ್ರೀಡೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಕ್ರೀಡಾಕೂಟಗಳು ಮತ್ತು ಸೆಮಿನಾರ್‌ಗಳನ್ನು ಆಯೋಜಿಸಲಾಗುತ್ತದೆ. ರಾಷ್ಟ್ರೀಯ ಕ್ರೀಡಾ ದಿನದಂದು, ಭಾರತ ಸರ್ಕಾರವು ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಮೇಜರ್ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿ, ಅರ್ಜುನ್ ಪ್ರಶಸ್ತಿ ಮತ್ತು ದ್ರೋಣಾಚಾರ್ಯ ಪ್ರಶಸ್ತಿ, ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ರಾಷ್ಟ್ರಪತಿ ಭವನದಲ್ಲಿ ಪ್ರತಿ ವರ್ಷ ಈ ಸಮಾರಂಭವನ್ನು ನಡೆಸಲಾಗುತ್ತಿದ್ದು, ಭಾರತದ ರಾಷ್ಟ್ರಪತಿಗಳು ಕ್ರೀಡಾಪಟುಗಳಿಗೆ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಾರೆ.

ಭಾರತದ ಹಾಕಿ ಮಾಂತ್ರಿಕ ಮೇಜರ್‌ ಧ್ಯಾನ್‌ ಚಂದ್ :
         ಮೇಜರ್ ಧ್ಯಾನ್ ಚಂದ್ ಭಾರತದಲ್ಲಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಹಾಕಿ ಕ್ರೀಡಾಪಟು ಎನಿಸಿಕೊಂಡಿದ್ದರು. ಆತನನ್ನು ಸರಿಗಟ್ಟುವ ಆಟಗಾರ ಇಂದಿನ ವರೆಗೂ ವರೆಗೂ ಯಾರು ಇಲ್ಲ ಎಂಬುದು ಅಚ್ಚರಿಯ ವಿಷಯವೇ ಸರಿ. ವಿಶ್ವಕಂಡ ಅಪರೂಪದ, ಅತ್ಯುತ್ತಮ ಹಾಕಿ ಆಟಗಾರ ಎಂಬ ಹೆಗ್ಗಳಿಕೆಗೆ ಧ್ಯಾನ್‌ ಚಂದ್ ಪಾತ್ರರಾಗಿದ್ದರು.
 ಧ್ಯಾನ್‌ ಚಂದ್‌ ಅವರನ್ನು ಅಕ್ಕರೆಯಿಂದ 'ದಾದಾ' ಎಂದು ಕರೆಯಲಾಗುತ್ತಿತ್ತು. ದಾದಾ ಸಾಧನೆಗೆ ಕೈಗನ್ನಡಿಯೆಂಬಂತೆ 1956ನೇ ಇಸವಿಯಲ್ಲಿ ಭಾರತೀಯ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. 1928, 1932 ಹಾಗೂ 1936ರಲ್ಲಿ ಭಾರತಕ್ಕೆ ಒಲಿಂಪಿಕ್ ಹಾಕಿ ಚಿನ್ನದ ಪದಕವನ್ನು ಗೆಲ್ಲಿಸಿಕೊಟ್ಟಿದ್ದರು. ಅಲ್ಲದೆ 400ಕ್ಕೂ ಹೆಚ್ಚು ಅಂತರಾಷ್ಟ್ರೀಯ ಗೋಲುಗಳನ್ನು ಸಿಡಿಸಿದ್ದರು

ಧ್ಯಾನ್‌ ಚಂದ್‌ ಆಟಕ್ಕೆ ಮನಸೋತ ಜರ್ಮನಿಯ ಹಿಟ್ಲರ್ :

1936ರ ಬರ್ಲಿನ್ ಒಲಿಂಪಿಕ್ಸ್ ವೇಳೆ ಧ್ಯಾನ್ ಚಂದ್ ಆಟ ನೋಡಿ ಬೆಕ್ಕಸ ಬೆರಗಾಗಿದ್ದ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್, ಮೇಜರ್ ಧ್ಯಾನ್‌ ಚಂದ್‌ ಅವರಿಗೆ ಜರ್ಮನ್ ಪೌರತ್ವ ಮತ್ತು ತಮ್ಮ ಸೇನೆಯಲ್ಲಿ ದೊಡ್ಡ ಹುದ್ದೆಯನ್ನು ನೀಡುವುದಾಗಿ ಘೋಷಿಸಿದ್ದರು. ಆದರೆ ಅಪ್ಪಟ್ಟ ದೇಶಪ್ರೇಮಿ ಧ್ಯಾನ್‌ ಚಂದ್ ಅದನ್ನು ನಯವಾಗಿಯೇ ನಿರಾಕರಿಸಿದ್ದರು.

ಒಲಂಪಿಕ್ಸ್‌ನಲ್ಲಿ 3 ಬಂಗಾರ ಪದಕ ತಂದು ಕೊಟ್ಟಿದ್ದ ಧ್ಯಾನ್ ಚಂದ್ :

ಒಂಲಪಿಕ್ಸ್‌ ಕ್ರೀಡಾಕೂಟದಲ್ಲಿ ಹಾಕಿ ಆಟದಲ್ಲಿ ಮೂರು ಬಾರಿ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಮೇಜರ್ ಧ್ಯಾನ್‌ ಚಂದ್‌ ನೇತೃತ್ವದ ಹಾಕಿ ತಂಡ ಯಶಸ್ವಿಯಾಗಿತ್ತು. 1928, 1932 ಹಾಗೂ 1936ರಲ್ಲಿ ಸತತ ಮೂರು ಭಾರತ ಹಾಕಿ ತಂಡ ಬಂಗಾರದ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿತ್ತು. ಇದರಲ್ಲಿ ಮೆಜರ್ ಧ್ಯಾನ್‌ ಚಂದ್‌ ಅವರ ಪಾತ್ರ ಬಹಳ ಪ್ರಮುಖವಾಗಿತ್ತು.

      ಹಾಕಿ ಮಾಂತ್ರಿಕ  ಮೇಜರ್ ಧ್ಯಾನ್‌ ಚಂದ್‌ ಅವರು 1948 ರಲ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಹಾಕಿ ಪಂದ್ಯವನ್ನಾಡಿದ್ದರು. ಮೇಜರ್ ಧ್ಯಾನ್‌ ಚಂದ್ ಡಿಸೆಂಬರ್ 03, 1979 ರಲ್ಲಿ ಮರಣ ಹೊಂದಿದರು.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post