Menu

Home ನಲಿಕಲಿ About ☰ Menu


 

🔍

ಶ್ರೀ ಮೊರಾರ್ಜಿ ದೇಸಾಯಿ ಭಾರತದ ಪ್ರಧಾನ ಮಂತ್ರಿ.

    ಶ್ರೀ ಮೊರಾರ್ಜಿ ರಾಂಚೋಡ್ಜಿ ದೇಸಾಯಿ
(29 ಫೆಬ್ರವರಿ 1896 - 10 ಏಪ್ರಿಲ್ 1995)
ಶ್ರೀ ಮೊರಾರ್ಜಿ ದೇಸಾಯಿ ಭಾರತದ ಪ್ರಧಾನ ಮಂತ್ರಿ.
ಶ್ರೀ ಮೊರಾರ್ಜಿ ದೇಸಾಯಿ ಅವರು ಫೆಬ್ರವರಿ 29, 1896ರಲ್ಲಿ ಗುಜರಾತ್ನ ಈಗಿನ ಬಲ್ಸುರ್ ಜಿಲ್ಲೆಯ ಭೆದೆಲಿ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಶಾಲಾ ಶಿಕ್ಷಕರು ಹಾಗೂ ಕಟ್ಟುನಿಟ್ಟಿನ ಮನುಷ್ಯರಾಗಿದ್ದರು. ಬಾಲ್ಯದಿಂದಲೂ ಮೊರಾರ್ಜಿ ದೇಸಾಯಿ ಅವರು ತಮ್ಮ ತಂದೆಯಿಂದ ಪರಿಶ್ರಮ ಮತ್ತು ಎಲ್ಲ ಸನ್ನಿವೇಶದಲ್ಲೂ ಸತ್ಯಸಂದತೆಯ ಮೌಲ್ಯಗಳನ್ನು ಕಲಿತರು. ಸೇಂಟ್ ಬುಸರ್ ಹೈಸ್ಕೂಲ್ನಲ್ಲಿ ಶಾಲಾ ಶಿಕ್ಷಣ ಪಡೆದ ಅವರು ತಮ್ಮ ಮೆಟ್ರಿಕ್ಯೂಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ನಂತರ 1918ರಲ್ಲಿ ಆಗಿನ ಬಾಂಬೆ ಪ್ರಾಂತ್ಯದ ವಿಲ್ಸನ್ ಸಿವಿಲ್ ಸರ್ವಿಸ್ನಿಂದ ಪದವಿ ಶಿಕ್ಷಣ ಪಡೆದು 12 ವರ್ಷಗಳ ಕಾಲ ಡೆಪ್ಯೂಟಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದರು.

1930ರಲ್ಲಿ ಭಾರತದಲ್ಲಿ ಮಹಾತ್ಮ ಗಾಂಧಿ ಅವರಿಂದ ಸ್ವಾತಂತ್ರ್ಯ ಚಳವಳಿ ಆರಂಭವಾಗಿತ್ತು. ಶ್ರೀ ದೇಸಾಯಿ ಅವರು ಬ್ರಿಟಿಷ್ ನ್ಯಾಯದಲ್ಲಿ ವಿಶ್ವಾಸ ಕಳೆದುಕೊಂಡು ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಲು ನಿರ್ಧರಿಸಿದರು. ಇದು ತುಂಬಾ ಕಷ್ಟದ ನಿರ್ಧಾರವಾಗಿತ್ತು. ಆದರೆ ಶ್ರೀ ದೇಸಾಯಿ ಅವರು “ಇದು ದೇಶದ ಸ್ವಾತಂತ್ರ್ಯದ ಪ್ರಶ್ನೆಯಾಗಿರುವಾಗ, ಅಧೀನ ಸ್ಥಿತಿಯಲ್ಲಿ ಕುಟುಂಬ ಆಕ್ರಮಿತವಾಗಿರುವ ಸಮಸ್ಯೆಗಳಿಗೆ ಸಂಬಂಧಿಸಿದ್ದು” ಎಂದು ಭಾವಿಸಿದ್ದರು.

ಸ್ವಾತಂತ್ರ್ಯ ಸಂಗ್ರಾಮದ ವೇಳೆ ಶ್ರೀದೇಸಾಯಿ ಅವರು ಮೂರು ಬಾರಿ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದರು. 1931ರಲ್ಲಿ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯರಾಗಿದ್ದರು ಹಾಗೂ 1937ರ ತನಕ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

1937ರಲ್ಲಿ ಮೊದಲ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡಾಗ, ಆಗಿನ ಬಾಂಬೆ ಪ್ರಾಂತ್ಯದಲ್ಲಿ ಶ್ರೀ ಬಿ.ಜಿ.ಖೇರ್ ನೇತೃತ್ವದ ಸಂಪುಟದಲ್ಲಿ ಅವರು ಕಂದಾಯ, ಕೃಷಿ, ಅರಣ್ಯ ಮತ್ತು ಸಹಕಾರಗಳ ಸಚಿವರಾಗಿದ್ದರು ಜನರ ಸಮ್ಮತಿ ಇಲ್ಲದೇ ಭಾರತವು ವಿಶ್ವ ಯುದ್ಧದಲ್ಲಿ ಪಾಲ್ಗೊಂಡಿದ್ದನ್ನು ಪ್ರತಿಭಟಿಸಿ 1939ರಲ್ಲಿ ಕಾಂಗ್ರೆಸ್ ಸಂಪುಟವು ಹೊರ ಬಂದಿತು.

ಶ್ರೀ ದೇಸಾಯಿ ಅವರು ಮಹಾತ್ಮ ಗಾಂಧಿ ಅವರು ಆರಂಭಿಸಿ ವೈಯಕ್ತಿಕ ಸತ್ಯಾಗ್ರಹದ ವೇಳೆ ಬಂಧನಕ್ಕೆ ಒಳಗಾಗಿ ಅಕ್ಟೋಬರ್, 1941ರಲ್ಲಿ ಬಿಡುಗಡೆಗೊಂಡರು ಹಾಗೂ ಕ್ವಿಟ್ ಇಂಡಿಯಾ ಚಳವಳಿ ಸಮಯದಲ್ಲಿ ಅಗಸ್ಟ್ 1942ರಂದು ಮತ್ತೆ ಬಂಧನಕ್ಕೆ ಒಳಗಾದರು. 1946ರಲ್ಲಿ ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆದ ನಂತರ, ಬಾಂಬೆಯಲ್ಲಿ ಅವರು ಗೃಹ ಮತ್ತು ಕಂದಾಯ ಸಚಿವರಾದರು. ತಮ್ಮ ಅವಧಿಯಲ್ಲಿ ಶ್ರೀ ದೇಸಾಯಿ ಅವರು, ‘ಉಳುವವನಿಗೆ ಭೂಮಿ’ ಎಂಬ ಭದ್ರತಾ ಹಕ್ಕುಗಳನ್ನು ಒದಗಿಸುವ ಮೂಲಕ ಭೂ ಸುಧಾರಣೆಯಲ್ಲಿ ಅನೇಕ ಸುಧಾರಣೆಗಳನ್ನು ತಂದರು. ಪೊಲೀಸ್ ಆಡಳಿತದಲ್ಲಿ, ಜನರು ಮತ್ತು ಪೊಲೀಸರ ನಡುವಣ ತಡೆಯನ್ನು ತೆಗೆದುಹಾಕಿದರು ಹಾಗೂ ಜೀವ ಮತ್ತು ಆಸ್ತಿಗಳಿಗೆ ರಕ್ಷಣೆ ನೀಡುವಲ್ಲಿ ಜನರ ಅಗತ್ಯಗಳಿಗೆ ಹೆಚ್ಚು ಸ್ಪಂದಿಸುವಂತೆ ಪೊಲೀಸ ಆಡಳಿತವನ್ನು ಸುಧಾರಣೆ ಮಾಡಿದರು. 1952ರಲ್ಲಿ ಅವರು ಬಾಂಬೆ ಮುಖ್ಯಮಂತ್ರಿಯಾದರು.

ಅವರ ಪ್ರಕಾರ, ಗ್ರಾಮಗಳು ಮತ್ತು ಪಟ್ಟಣಗಳ ಬಡವರು ಮತ್ತು ಸೌಲಭ್ಯ ವಂಚಿತರು ಉತ್ತಮ ಗುಣಮಟ್ಟದ ಜೀವನವನ್ನು ಅನುಭವಿಸುವ ತನಕ ಸಮಾಜವಾದ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಪ್ರತಿಪಾದಿಸಿದ್ದರು. ಶ್ರೀದೇಸಾಯಿ ಅವರು ಕೃಷಿಕರು ಮತ್ತು ಬಾಡಿಗೆದಾರರ ಕಷ್ಟಗಳಿಗೆ ಸ್ಪಂದಿಸಿ, ಪ್ರಗತಿಪರ ಶಾಸನಗಳನ್ನು ಜಾರಿಗೊಳಿಸುವ ಮೂಲಕ ತಮ್ಮ ಆಲೋಚನೆಗೆ ಸ್ಪಷ್ಟ ನಿಲುವು ನೀಡಿದರು. ಇದರಲ್ಲಿ ಶ್ರೀ ದೇಸಾಯಿ ಅವರ ಸರ್ಕಾರವು ದೇಶದ ಇತರೆ ಯಾವುದೇ ರಾಜ್ಯಗಳಿಗಿಂತ ಮುಂಚೂಣಿಯಲ್ಲಿತ್ತು.

ರಾಜ್ಯಗಳ ಪುನರ್ ಸಂಘಟನೆ ನಂತರ, ಶ್ರೀದೇಸಾಯಿ ಅವರು ನವೆಂಬರ್ 14, 1956ರಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಸಚಿವರಾಗಿ ಕೇಂದ್ರ ಸಂಪುಟ ಸೇರಿದರು. ನಂತರ ಅವರು ಮಾರ್ಚ್ 22, 1958ರಲ್ಲಿ ಹಣಕಾಸು ಖಾತೆಯನ್ನು ನಿರ್ವಹಿಸಿದರು.

ಶ್ರೀ ದೇಸಾಯಿ ಅವರು ಆರ್ಥಿಕ ಯೋಜನೆ ಮತ್ತು ಹಣಕಾಸು ಆಡಳಿತದಲ್ಲಿ ಸಾಕಷ್ಟು ಉತ್ತಮ ಸುಧಾರಣೆಗಳನ್ನು ತಂದರು. ರಕ್ಷಣೆ ಮತ್ತು ಅಭಿವೃದ್ಧಿ ಕ್ಷೇತ್ರಗಳ ಅಗತ್ಯಗಳನ್ನು ಪೂರೈಸಲು, ಅವರು ಹೆಚ್ಚು ಆದಾಯಗಳನ್ನು ಕ್ರೋಢೀಕರಿಸಿ, ಅನಗತ್ಯ ವೆಚ್ಚಗಳಿಗೆ ಲಗಾಮು ಹಾಕಿದರು. ಕಟ್ಟುನಿಟ್ಟು ಆರ್ಥಿಕ ಶಿಸ್ತು-ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಅವರು ತುಂಬಾ ಕಡಿಮೆ ವಿತ್ತೀಯ ಕೊರೆತೆಯನ್ನು ನಿರ್ವಹಿಸಿದರು. ಸಮಾಜದ ಶ್ರೀಮಂತರ ಐಷಾರಾಮಿ ಮತ್ತು ಭೋಗ ಜೀವನದಕ್ಕೆ ಕಡಿವಾಣ ಹಾಕಿದರು.

1963ರಲ್ಲಿ, ಅವರು ಕಾಮರಾಜ ಯೋಜನೆ ಅನ್ವಯ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದರು. ಪಂಡಿತ್ ಜವಹಾರ್ ಲಾಲ್ ನೆಹರು ಅವರ ನಂತರ ಶ್ರೀಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಮಂತ್ರಿಯಾದರು. ಆಡಳಿತ ವ್ಯವಸ್ಥೆಯನ್ನು ಪುನರ್ರಚಿಸಲು ಆಡಳಿತಾತ್ಮಕ ಸುಧಾರಣಾ ಆಯೋಗದ ಅಧ್ಯಕ್ಷರಾಗುವಂತೆ ಶಾಸ್ತ್ರಿ ಅವರು ದೇಸಾಯಿ ಅವರಿಗೆ ಸೂಚಿಸಿದರು. ಸಾರ್ವಜನಿಕ ಜೀವನದಲ್ಲಿ ಅವರ ಸುದೀರ್ಘ ಮತ್ತು ವ್ಯಾಪಕ ಅನುಭವದಿಂದ ತಮಗೆ ವಹಿಸಿದ ಹೊಣೆಯನ್ನು ದೇಸಾಯಿ ಯಶಸ್ವಿಯಾಗಿ ನಿಭಾಯಿಸಿದರು.

1967ರಲ್ಲಿ, ಶ್ರೀದೇಸಾಯಿ ಅವರು ಶ್ರೀಮತಿ ಇಂದಿರಾ ಗಾಂಧಿ ಅವರ ಸಂಪುಟದಲ್ಲಿ ಉಪ ಪ್ರಧಾನಿ ಮತ್ತು ಹಣಕಾಸು ಸಚಿವರಾಗಿ ಸೇರ್ಪಡೆಯಾದರು. ಜುಲೈ 1969ರಲ್ಲಿ ಶ್ರೀಮತಿ ಇಂದಿರಾಗಾಂಧಿ ಅವರು ದೇಸಾಯಿ ಅವರಿಂದ ಹಣಕಾಸು ಖಾತೆಯನ್ನು ವಾಪಸ್ ಪಡೆದರು. ಸಹದ್ಯೋಗಿಗಳ ಖಾತೆಗಳನ್ನು ಬದಲಾವಣೆ ಮಾಡಲು ಪ್ರಧಾನಮಂತ್ರಿ ಅವರಿಗೆ ವಿಶೇಷಾಧಿಕಾರ ಇದೆ ಎಂದು ಹೇಳಿಕೆ ನೀಡಿದರಾದರೂ, ಶ್ರೀಮತಿ ಇಂದಿರಾ ಗಾಂಧಿಯವರು ಈ ಬಗ್ಗೆ ತಮ್ಮನ್ನು ಸಂಪರ್ಕಿಸುವ ಕನಿಷ್ಠ ಸೌಜನ್ಯವನ್ನು ತೋರದಿರುವುದು ತಮ್ಮ ಆತ್ಮಗೌರವಕ್ಕೆ ಘಾಸಿ ಉಂಟಾಗಿದೆ ಎಂಬ ಭಾವನೆ ವ್ಯಕ್ತಪಡಿಸಿ ಅನ್ಯ ಮಾರ್ಗವಿಲ್ಲದೇ ಭಾರತದ ಉಪ ಪ್ರಧಾನಮಂತಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

1969ರಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾದಾಗ, ಶ್ರೀ ದೇಸಾಯಿ ಅವರು ಆರ್ಗನೈಷೇಷನ್ ಕಾಂಗ್ರೆಸ್ನಲ್ಲೇ ಇದ್ದರು. ಅವರು ವಿರೋಧದ ಮುಂಚೂಣಿ ಸ್ಥಾನದಲ್ಲಿ ಮುಂದುವರೆದರು. 1971ರಲ್ಲ ಅವರಿ ಸಂಸತ್ಗೆ ಮರು ಆಯ್ಕೆಯಾದರ. 1975ರಲ್ಲಿ, ಅವರು ವಿಸರ್ಜನೆಗೊಂಡ ಗುಜರಾಜ್ ವಿಧಾನಸಭೆಗೆ ಚುನಾವಣೆಗಳನ್ನು ನಡೆಸುವುದನ್ನು ಪ್ರಶ್ನಿಸಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡರು. ಅವರ ನಿರಶನದ ಫಲವಾಗಿ, ಜೂನ್ 1975ರಲ್ಲಿ ಚುನಾವಣೆಗಳು ನಡೆದವು. ನಾಲ್ಕು ವಿರೋಧ ಪಕ್ಷಗಳು ಹಾಗೂ ಅದಕ್ಕೆ ಬೆಂಬಲ ಸ್ವತಂತ್ರ ಅಭ್ಯರ್ಥಿಗಳು ರಚಿಸಿದ ಜನತಾರಂಗವು ಹೊಸ ಸದನದಲ್ಲಿ ಸ್ಪಷ್ಟ ಬಹುಮತ ಗಳಿಸಿತು. ಲೋಕಸಭೆಗೆ ಶ್ರೀಮತಿ ಇಂದಿರಾಗಾಂಧಿ ಅವರ ಆಯ್ಕೆಯು ಅನೂರ್ಜಿತ ಎಂದು ಅಲಹಾಬಾದ್ ಹೈಕೋರ್ಟ್ ಘೋಷಿಸಿ ತೀರ್ಪು ನೀಡಿದ ನಂತರ, ಪ್ರಜಾಸತ್ತಾತ್ಮಕ ತತ್ತ್ವಗಳಿಗೆ ಗೌರವ ನೀಡಿ ಶ್ರೀಮತಿ ಗಾಂಧಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಶ್ರೀ ದೇಸಾಯಿ ಅಭಿಪ್ರಾಯಪಟ್ಟರು.

ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ಜೂನ್ 26, 1975ರಲ್ಲಿ ಶ್ರೀ ದೇಸಾಯಿ ಅವರನ್ನು ಬಂಧಿಸಿ ಸೆರೆಮನೆಗೆ ಕಳುಹಿಸಲಾಯಿತು. ಅವರನ್ನು ಏಕಾಂತ ಶಿಕ್ಷೆಗೆ ಒಳಪಡಿಸಿ ಜನವರಿ 18, 1977ರಂದು ಬಿಡುಗಡೆ ಮಾಡಲಾಯಿತು. ಲೋಕಸಭೆಗೆ ಚುನಾವಣೆ ನಡೆಸುವ ನಿರ್ಧಾರಕ್ಕಿಂತ ಸ್ವಲ್ಪ ಮುನ್ನ ಶ್ರೀ ದೇಸಾಯಿ ಬಂಧಮುಕ್ತರಾದರು. ದೇಶದ ಉದ್ದಗಲಕ್ಕೂ ಅವರು ಅವರು ಬಿರುಸಿನ ಪ್ರಚಾರ ನಡೆಸಿದರು. ಹದಿನಾರನೇ ಲೋಕಸಭೆಗೆ ಮಾರ್ಚ್ 1977ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲಲ್ಲಿ ಜನತಾ ಪಕ್ಷ ಗೆಲುವು ಸಾಧಿಸಲು ಅವರು ಮಹತ್ವದ ಪಾತ್ರ ವಹಿಸಿದರು. ಶ್ರೀ ದೇಸಾಯಿ ಅವರು ಗುಜರಾತ್ನ ಸೂರತ್ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದರು. ನಂತರ ಸಂಸತ್ನಲ್ಲಿ ಜನತಾ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿ ಮಾರ್ಚ್ 24, 1977ರಂದು ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಶ್ರೀ ದೇಸಾಯಿ ಮತ್ತು ಶ್ರೀಮತಿ ಗುಜ್ರಾಬೆನ್ ಅವರು 1911ರಲ್ಲಿ ವಿವಾಹವಾದರು. ಅವರ ಐವರು ಮಕ್ಕಳಲ್ಲಿ ಒರ್ವ ಪುತ್ರಿ ಮತ್ತು ಒಬ್ಬ ಮಗ ಬದುಕಿದ್ದಾರೆ.

ಪ್ರಧಾನಮಂತ್ರಿಯಾಗಿ ಶ್ರೀ ದೇಸಾಯಿ ಅವರು ನುಡಿದ ಘೋಷ ವಾಕ್ಯಗಳು ಅರ್ಥಪೂರ್ಣವಾಗಿದ್ದವು. ಯಾರೇ ಅಗಲಿ, ಅವರು ಎಷ್ಟೇ ದೊಡ್ಡವರಾಗಲಿ ಅವರು ತಪ್ಪು ಮಾಡಿದರೆ ಅದನ್ನು ಪ್ರಶ್ನಿಸುವಂಥ ಎದೆಗಾರಿಕೆಯನ್ನು ಭಾರತದ ಪ್ರಜೆಗಳು ಮೈಗೂಡಿಸಿಕೊಳ್ಳಬೇಕು. ಪ್ರಧಾನಮಂತ್ರಿಯೇ ಆಗಿರಲಿ ಆತ ತಪ್ಪು ಮಾಡಿದರೆ ಅದನ್ನು ಮತದಾರರು ಪ್ರಶ್ನಿಸಬೇಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಅವರು ಸಾರಿದ್ದರು.

ಶ್ರೀ ದೇಸಾಯಿ ಅವರು ಸತ್ಯಸಂದರಾಗಿದ್ದರು. ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಅವರೆಂದು ಬಿಟ್ಟುಕೊಟ್ಟವರಲ್ಲ. ಎಂಥ ಸನ್ನಿವೇಶದಲ್ಲೂ ಅವರು ಸತ್ಯವನ್ನೇ ಹೇಳುತ್ತಿದ್ದರು. “ಸತ್ಯದ ಹಾಗೂ ದೃಢ ನಂಬಿಕೆ ಪ್ರಕಾರ ಪ್ರತಿಯೊಬ್ಬರೂ ಜೀವನದಲ್ಲಿ ನಡೆದುಕೊಳ್ಳಬೇಕು’ ಎಂಬುದು ಅವರ ಧ್ಯೇಯ ವಾಕ್ಯವಾಗಿತ್ತು.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post