Menu

Home ನಲಿಕಲಿ About ☰ Menu


 

🔍

ಎಲ್ಲಾದರು ಇರು ಎಂತಾದರು ಇರು - ಕುವೆಂಪು

ಎಲ್ಲಾದರು ಇರು; ಎಂತಾದರು ಇರು;
ಎಂದೆಂದಿಗು ನೀ ಕನ್ನಡವಾಗಿರು.

ಕನ್ನಡ ಗೋವಿನ ಓ ಮುದ್ದಿನ  ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!

ನೀ ಮೆಟ್ಟುವ ನೆಲ – ಅದೆ ಕರ್ನಾಟಕ;
ನೀನೇರುವ ಮಲೆ – ಸಹ್ಯಾದ್ರಿ.
ನೀ ಮುಟ್ಟುವ ಮರ – ಶ್ರೀಗಂಧದ ಮರ;
ನೀ ಕುಡಿಯುವ ನೀರ್ – ಕಾವೇರಿ.

ಪಂಪನನೋದುವ ನಿನ್ನಾ ನಾಲಗೆ
ಕನ್ನಡವೇ ಸತ್ಯ.
ಕುಮಾರವ್ಯಾಸನನಾಲಿಪ ಕಿವಿಯದು
ಕನ್ನಡವೇ ನಿತ್ಯ.
ಹರಿಹರ ರಾಘವರಿಗೆ ಎರಗುವ ಮನ,
ಹಾಳಾಗಿಹ ಹಂಪೆಗೆ ಕೊರಗುವ ಮನ,
ಪೆಂಪಿನ ಬನವಾಸಿಗೆ ಕರಗುವ ಮನ;
ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ,
ಜೋಗದ ಜಲಪಾತದಿ ಧುಮುಕುವ ಮನ
ಮಲೆನಾಡಿಗೆ ಹೊಂಪುಳಿವೋಗುವ ಮನ;
ಎಲ್ಲಿದ್ದರೆ ಏನ್? ಎಂತಿದ್ದರೆ ಏನ್?
ಎಂದೆಂದಿಗು ತಾನ್-
ಕನ್ನಡವೇ ಸತ್ಯ!
ಕನ್ನಡವೇ ನಿತ್ಯ!

ಕಾಜಾಣಕೆ ಗಿಳಿ ಕೋಗಿಲೆಯಿಂಪಿಗೆ,
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ,
ಮಾವಿನ ಹೊಂಗೆಯ ತಳಿರಿನ ತಂಪಿಗೆ,
ರಸರೋಮಾಂಚನಗೊಳುವಾತನ ಮನ
ಎಲ್ಲಿದ್ದರೆ ಏನ್? ಎಂತಿದ್ದರೆ ಏನ್?
ಎಂದೆಂದಿಗು ತಾನ್-
ಕನ್ನಡವೇ ಸತ್ಯ!
ಕನ್ನಡವೇ ನಿತ್ಯ!
ಅನ್ಯವನೆಲದೆ ಮಿಥ್ಯಾ!


ಸಾಹಿತ್ಯ: ಕುವೆಂಪು

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post